ಟಿ. ಎಮ್. ಸೌಂದರರಾಜನ್ (ಮಾರ್ಚ್ ೨೪, ೧೯೨೩ - ಮೇ ೨೫, ೨೦೧೩) ದಕ್ಷಿಣ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ಹಿನ್ನೆಲೆಗಾಯಕರು. == ಕಲೆಯಲ್ಲಿ ಅರಳಿದ ಜೀವನ == ಟಿ ಎಮ್ ಸೌಂದರರಾಜನ್ ಅವರು ೧೯೨೩ರ ವರ್ಷದಲ್ಲಿ ಮಧುರೈ ಪಟ್ಟಣದಲ್ಲಿ ಜನಿಸಿದರು. ಹೊಟ್ಟೆ ಪಾಡಿಗಾಗಿ ಮಧುರೈ ಬಿಟ್ಟು ಹೊರಟ ಟಿ ಎಮ್ ಎಸ್ ಅವರು ಕೊಯಂಬತ್ತೂರಿನ ರಾಯಲ್ ಟಾಕೀಸಿಗೆ ತಿಂಗಳಿಗೆ ೫೦ರೂಪಾಯಿ ಸಂಭಳಕ್ಕೆ ಸೇರಿದರು. ೧೯೫೦ರ ವರ್ಷದಲ್ಲಿ ಅವರು ‘ಕೃಷ್ಣ ವಿಜಯಂ’ ಚಿತ್ರಕ್ಕೆ ಪ್ರಥಮ ಬಾರಿಗೆ ಹಿನ್ನೆಲೆಗಾಯಕರಾಗಿ ಹಾಡಿದರು. ತಮಿಳು ನಾಡಿನ ಪ್ರಖ್ಯಾತ ಕಲಾವಿದರಾದ ಎಂ. ಜಿ. ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಅವರ ಬಹುತೇಕ ಚಿತ್ರಗಳಲ್ಲಿ ಟಿ ಎಮ್. ಸೌಂದರರಾಜನ್ ಅವರ ಗೀತೆಗಳು ಪ್ರಖ್ಯಾತಿ ಪಡೆದಿದ್ದವು. ಪ್ರಾರಂಭದ ದಶಕಗಳಲ್ಲಿ ಅವರು ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಮುಂತಾದವರಿಗೆ ಕನ್ನಡದಲ್ಲಿ ಸಹಾ ಹಿನ್ನೆಲೆ ಗಾಯನ ನೀಡಿದ್ದರು. ರತ್ನಗಿರಿ ರಹಸ್ಯ, ಪ್ರೇಮ ಮಯಿ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ಟಿ. ಎಮ್. ಸೌಂದರರಾಜನ್ ಅವರ ಪ್ರಖ್ಯಾತ ಗೀತೆಗಳಿವೆ. ಹಲವಾರು ಚಿತ್ರಗಳಲ್ಲಿ ಅವರ ನಟರಾಗಿಯೂ ಅಭಿನಯಿಸಿದ್ದರು. == ಅನುಮಪ ಸೇವೆ == ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನೂ ಸೇರಿದಂತೆ ಸುಮಾರು ೧೦,೦೦೦ಕ್ಕೂ ಹೆಚ್ಚು ಚಿತ್ರಗೀತೆಗಳು ಮತ್ತು ೩೦೦೦ಕ್ಕೂ ಹೆಚ್ಚು ಭಕ್ತಿಗೀತೆಗಳನ್ನೂ ಹಾಡಿದ್ದ ಟಿ. ಎಮ್. ಸೌಂದರರಾಜನ್ ಅವರ ೬ ದಶಕಗಳಿಗೂ ಹೆಚ್ಚು ಕಾಲದ ಗಾಯನ ಸೇವೆ ಅನುಪಮವಾದದ್ದು. == ವಿದಾಯ == ಟಿ. ಎಮ್. ಸೌಂದರರಾಜನ್ ಅವರು ೨೫, ೨೦೧೩ರಂದು ಚೆನ್ನೈನಲ್ಲಿ ನಿಧನರಾದರು. ಟಿ ಎಮ್ ಎಸ್ ಎಂದೇ ಪ್ರಖ್ಯಾತರಾದ ಅವರಿಗೆ ೯೧ ವರ್ಷ ವಯಸ್ಸಾಗಿತ್ತು.